ಶ್ರೀರಸ್ತು
ಶ್ರೀ ಆಂಜನೇಯ ಕ್ಷೇತ್ರ
ಪೆನ್ನಾ ನದಿ ತೀರ ಪ್ರದೇಶದ ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಡ ಮತ್ತು ಬಲ ಪದಗಳ ಪಾದಮುದ್ರಿಕೆಗಳು ಕಂಡುಬರುತ್ತವೆ. ರುದ್ರ ಎಂದರೆ ಶಿವನು ಈ ನದಿ ತೀರದಲ್ಲಿ ನಡೆದಾಡಿದನೆಂಬುದು ಐತಿಹ್ಯ, ಪೆನ್ನಾ ನದಿಯು ಹರಿಯುವ ಪ್ರದೇಶಗಳಾದ ವಿದುರಾಶ್ವತ್ಥ, ಶಾಸನಕೋಟ, ರೊದ್ದಂ, ಪಾಮಿಡಿ ಪ್ರದೇಶಗಳ ತೀರದಲ್ಲಿ ರುದ್ರಪಾದಗಳು ಕಂಡುಬರುವುದು ವಿಶೇಷವೇ ಸರಿ.
ರೊದ್ದಂನಿಂದ ಸುಮಾರು ಆರು ಕಿ.ಮೀ. ಗಳ ಅಂತರದಲ್ಲಿ ಕರ್ನಾಟಕದ ಸರಿಹದ್ದಿನಲ್ಲಿ ಕಂಡುಬರುವ ಗ್ರಾಮವೇ ಕೊಡಮಡಗು. ಇಲ್ಲಿ ಕನ್ನಡ ಆಡಳಿತ ಭಾಷೆಯಾದರೂ ಹಲವರ ವ್ಯಾವಹಾರಿಕ ಭಾಷೆ ತೆಲುಗು ಆಗಿದೆ. ಇದು ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆಗೆ ಸೇರಿದೆ.
ಕೊಡಮಡಗು ನೋಡಲು ಒಂದು ಸಾಧಾರಣ ಗ್ರಾಮವಾದಾಗ್ಯೂ ಇಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯ ಕಾರಣದಿಂದಾಗಿ ಇದಕ್ಕೆ ವಿಶೇಷವಾದ ಖ್ಯಾತಿಯು ಲಭಿಸಿದೆ. ಈ ಗ್ರಾಮಕ್ಕೆ 'ಕೊಡಮಡಗು' ಎಂಬ ಹೆಸರು ಬರಲು ವಿಶೇಷವಾದ ಒಂದು ಕಥೆಯುಂಟು.
ಈ ಗ್ರಾಮದ ಮೂಲ ಹೆಸರು ತಿಳಿಯದು. ಈ ಕುಗ್ರಾಮದಲ್ಲಿ ಸದ್ಗುಣ ಸಂಪನ್ನವಾದ ವೈದಿಕ ಸ್ಮಾರ್ಥ ಮುಲಕನಾಡು ಶಾಖೆಗೆ ಸೇರಿದ ಬ್ರಾಹ್ಮಣ ಕುಟುಂಬವೊಂದು ವಾಸವಾಗಿತ್ತು. ಭಾರದ್ವಾಜ ಗೋತ್ರಕ್ಕೆ ಸೇರಿದ, ಈ ವಂಶದ ಶ್ರೀರಾಮದಾಸ ಶಾಸ್ತ್ರೀ ಪರಮ ನಿಷ್ಠಾವಂತ, ಸಾರಸ್ವತ ಜೀವಿಯಾಗಿದ್ದರು. ತಾತ ಮುತ್ತಾತಂತಿರ ಕಾಲದಿಂದಲೂ ಆ ಪ್ರಾಂತ್ಯಕ್ಕೆ ಮಕುಟವಿಲ್ಲದ ಮಹಾರಾಜರಾಗಿದ್ದವರು.
ಇವರ ಪೂರ್ವಜರಲ್ಲಿ ಒಬ್ಬರಿಗೆ ಮುಂಜಾನೆ ಒಂದು ಸ್ವಪ್ನವಾಯಿತಂತೆ. ಆ ಊರಿನ ಮಡುವಿನ ಬಳಿ ಘರ್ಜನೆ ಮೊಳಗಿದಂತೆ ಭಾಸವಾಗಿ, “ನಾನಿಲ್ಲಿಯೇ ಇದ್ದೇನೆ! ಬನ್ನಿ” ಎಂದು ಪದೇ ಪದೇ ಹೇಳಿದಂತಾಗಿ ಅವರಿಗೆ ಎಚ್ಚರವಾಯಿತು. ಉದಯಲ್ಲಿಯೇ ಆ ಊರಿನ ಹತ್ತು-ಹನ್ನೆರಡು ಜನರನ್ನು ಒಟ್ಟುಗೂಡಿಸಿಕೊಂಡು ದಕ್ಷಿಣ ದಿಕ್ಕಿನಲ್ಲಿದ್ದ ಆ ಮಡುವಿನ ಬಳಿಗೆ ಬಂದರಂತೆ. ಮಡುವಿನ ಬಳಿ ಏನೋ ಶಬ್ದವಾಯಿತಂತೆ.
ಧೈರವಂತರಾದ ಕೆಲವರು ಮಡುವಿನಲ್ಲಿಳಿದು ಸುತ್ತಲೂ ಪರಿಶೀಲಿಸಲು ಒಂದು ದೊಡ್ಡ ಬಂಡೆ ಕಂಡುಬಂದಿತು. ಅದನ್ನು ದಡಕ್ಕೆ ತಂದು ನೋಡಿದರೆ ಹನುಮಂತನ ವಿಗ್ರಹ ಸುಂದರವಾಗಿದ್ದ ಆ ಶಿಲಾ ವಿಗ್ರಹವನ್ನು ಅಲ್ಲಿಯೇ ಪ್ರತಿಷ್ಠಾಪಿಸಿ ದೇಗುಲವನ್ನು ನಿರ್ಮಿಸಿದರು. ಇದರಿಂದಾಗಿ ಈ ಗ್ರಾಮಕ್ಕೆ ಕೊಡಿಮಡುಗು ಕೊಡಮಡಗು ಎಂಬ ಹೆಸರು ಬಂದಿತೆಂದು ಪ್ರತೀತಿ.
ರಾಮದಾಸಶಾಸ್ತ್ರಿ ಪ್ರತಿನಿತ್ಯ ಶಿವಾರ್ಚನ ಮಾಡುವಂತಹವರು. ರಾಮಾಯಣ ಪಾರಾಯಣವೆಂದರೆ ಅತಿಯಾದ ಪ್ರೀತಿ, ರಾಮಾಯಣ ಕಾವ್ಯ ಆತನಿಗೆ ಕಂಠಪಾಠವಾಗಿತ್ತು. ಆತನ ಇಷ್ಟದೈವ ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿ, ಅವರ ಮನೆಯಲ್ಲಿ ಪ್ರತ್ಯೇಕವಾದ ಪೂಜಾಗೃಹವನ್ನು ನಿರ್ಮಿಸಿದ್ದರು. ಪ್ರತಿನಿತ್ಯ ಶಾಸ್ತ್ರಿಯವರ ಅನುಷ್ಠಾನದ ಧೂಪಾರಾಧನೆಯ ಸಮಯದಲ್ಲಿ ಘಂಟಾನಾದವು ಮೊಳಗುತ್ತಿದ್ದಂತೆ ಹಲವು ಕಾಲದಿಂದ ಅವರ ಮನೆಯಲ್ಲಿ ವಾಸವಾಗಿದ್ದ
ಘಟಸರ್ಪವು ನೈವೇದ್ಯ ಸಮಯವೆಂದರಿತು ಶಾಸ್ತ್ರಿಗಳ ಪಕ್ಕದಲ್ಲಿ ಹೆಡೆಬಿಚ್ಚಿ ನಿಲ್ಲುತ್ತಿತ್ತು. ಬಹಳ ಸಾಧು ಸ್ವಭಾವದ್ದಾಗಿತ್ತು ಆ ಸರ್ಪ. ಭಗವನ್ನಿವೇದನೆ ಈ ಸ್ವಾಮಿಗೇ ನೇರವಾಗಿ ಸಲ್ಲುತ್ತಿತ್ತು. ಇದು ಪ್ರತಿದಿನದ ಘಟನೆಯಾಗಿತ್ತಾದ್ದರಿಂದ, ಈ ಸರ್ಪವೂ ಆ ಕುಟುಂಬದ ಸದಸ್ಯನೇ ಆಗಿತ್ತು.
ಊಟದ ನಂತರ ಸ್ವತಃ ಧರ್ಮಶಾಸ್ತ್ರ ಪಾರಂಗತವಾದ ರಾಮದಾಸ ಶಾಸ್ತ್ರಿಗಳು ಮನೆಯ ಜಗುಲಿಯಲ್ಲಿ ಕುಳಿತು ಸುತ್ತಮುತ್ತಲ ಗ್ರಾಮಗಳ ಪಂಡಿತರ ಜೊತೆಯಲ್ಲಿ ಭಾರತ-ಭಾಗವತ ಗ್ರಂಥಗಳನ್ನು ಪರಿಶೀಲಿಸುತ್ತಾ, ಹಲವಾರು ವಿಷಯಗಳನ್ನು ಚರ್ಚಿಸುತ್ತಿದ್ದರು.
ಶಾಸ್ತ್ರಿಗಳ ಭಾವನವರು ಹನುಮದ್ ಭಕ್ತರಾದ ಶ್ರೀ ನೃಸಿಂಹ ಶೌತಿಗಳು ಅಮರಾಮರ ಗ್ರಾಮಕ್ಕೆ ಸೇರಿದವರು. ಒಮ್ಮೆ ಸಂಕ್ರಾಂತಿ ಹಬ್ಬಕ್ಕೆಂದು ತಮ್ಮ ಶ್ರೀಮತಿಯವರಾದ ಮಹಾಲಕ್ಷ್ಮಮ್ಮನನ್ನು ಕೊಡಮಡಗು ಗ್ರಾಮಕ್ಕೆ ಭಾವನವರ ಮನೆಗೆ ಕಳುಹಿಸಿಕೊಟ್ಟರು. ಆಕೆಯ ಕುತ್ತಿಗೆಯ ತುಂಬಾ ಬಂಗಾರದ ಆಭರಣಗಳು, ಕೈತುಂಬಾ ರತ್ನಾಭರಣಗಳು ಧರಿಸಿ ಸಾಕ್ಷಾತ್ ಮಹಾಲಕ್ಷ್ಮಿಯಂತೆಯೇ ಕಂಗೊಳಿಸುತ್ತಿದ್ದರು. ಆಕೆ ಕೊಡಮಡಗಿಗೆ ಬಂದ ಮೂರನೆಯ ದಿನವೇ ದುರದೃಷ್ಟವಶಾತ್ ಕಳ್ಳರು ಬಂದು ಮಹಾಲಕ್ಷ್ಮಮ್ಮನ ಆಭರಣಗಳೆಲ್ಲವನ್ನೂ ಕದ್ದೊಯ್ದರು. ಈ ವಾರ್ತೆಯನ್ನು ಕೇಳಿದ ನೃಸಿಂಹ ಗ್ರಾಮಕ್ಕೆ ಆಗಮಿಸಿದರು. ಇದರ ಮಾರನೆಯ ದಿನವೇ ಮಂಗಳವಾರ, ಹನುಮಜ್ಜಯಂತಿಯಾಗಿತ್ತು.
ಉದಯ ಕಾಲದಲ್ಲಿ ಎದ್ದು ಸ್ನಾನಾಹಿಕಗಳನ್ನು ಮುಗಿಸಿದ ಶೃತಿಗಳು ಆಂಜನೇಯ ಸ್ವಾಮಿಯ ಗುಡಿಗೆ ತೆರಳಿದರು. ಕಾಳುಮೆಣಸಿನ ಗಂಧವನ್ನು ತೇಯ್ದು ಅದು ಹನುಮನ ವಿಗ್ರಹಕ್ಕೆ ಲೇಪಿಸಿ ಶ್ರೀ ವೀರಾಂಜನೇಯ ಮೂಲಮಂತ್ರವನ್ನು ಪಠಿಸುತ್ತಾ ಗರ್ಭಗುಡಿಯ ಬಾಗಿಲುಗಳನ್ನು ಹಾಕಿ ಚಿಲಕವನ್ನು ಭದ್ರಪಡಿಸಿ ಆರಾಧನೆಯನ್ನು ಪ್ರಾರಂಭಿಸಿದರು. ಶ್ರತಿಗಳು ನೃಸಿಂಹೋಪಾಸಕರು. ಹಲವಾರು ಯಜ್ಞಯಾಗಾದಿಗಳನ್ನು ತಮ್ಮ ನೇತೃತ್ವದಲ್ಲಿ ನಡೆಸಿದವರು ಹಾಗೂ ಸ್ವತಃ ಆಚರಿಸಿದವರು. ಭೂತಪ್ರೇತಗಳಿಗೆ ಶೌತಿಗಳ ಮೂರ್ತಿ ದರ್ಶನವೂ ಸಿಂಹಸ್ವಪ್ನದಂತೆ, ಮಾರಣ-ಮೋಹನ-ಸ್ತಂಭನವಶೀಕರಣ ವಿದ್ಯೆಗಳಲ್ಲೆಲ್ಲಾ ಪರಿಣಿತರು.
ಎರಡು ದಿನಗಳಾದರೂ ಗುಡಿಯ ಬಾಗಿಲುಗಳನ್ನು ತೆರೆಯಲಿಲ್ಲ. ಬಂಧು-ಬಳಗದವ ಗ್ರಾಮಸ್ಥರೂ ತಂಡೋಪ ತಂಡವಾಗಿ ಬಂದು ನೋಡಿದರೂ ಗರ್ಭಗುಡಿಯ ಬಾಗಿಲನ್ನು ತಟ್ಟ ಧೈರ್ಯ ಯಾರಿಗೂ ಸಾಕಾಗದೆ ಹಿಂದಿರುಗಿದರು. ಆ ನಿದ್ರಾಹಾರಗಳಿರಲಿಲ್ಲ.
ಮೂರನೆಯ ದಿನ ಮುಂಜಾನೆ ಗರ್ಭಗುಡಿಯ ದ್ವಾರದ ಬಳಿ ಏನೋ ಸಪ್ಪಳವಾದಂತಾಗಿ ಬಂಧು ವರ್ಗದವರು ಬಂದು ನೋಡಲು ಯಾವುದೋ ಮೂಟೆಯೊಂದು ಕಂಡು ಬಂದಿತು. ರಾಮದಾಸ ಶಾಸ್ತ್ರಿಯವರು ಗಮನಿಸಿದಾಗ ಕಳುವಾದ ನಗ-ಆಭರಣಗಳನ್ನು ಒಳಗೊಂಡ ಮೂಟೆಯಾಗಿತ್ತು. ಯಾವುದೊಂದು ವಸ್ತುವೂ ಕಾಣೆಯಾಗಿರಲಿಲ್ಲ. ನಂತರ ಗರ್ಭಗುಡಿಯ ಬಾಗಿಲುಗಳು ತೆರೆದುಕೊಂಡವು. ಸಾಕ್ಷಾತ್ ವೀರಾಂಜನೇಯನೇ ಸಾಕ್ಷಾತ್ಕಾರಗೊಂಡಂತೆ ನೃಸಿಂಹ ಶೃತಿಗಳು ಹೊರಬಂದರು. “ಬದುಕಿಸಿದೆಯಯ್ಯಾ! ಆಂಜನೇಯಾ" ಎಂದು ಶೃತಿಗಳು ಆನಂದ ತುಂದಿಲಿತರಾದರು.
ಊರವರೆಲ್ಲಾ ಶೌತಿಗಳ ನಿಷ್ಠೆಗೆ, ಭಕ್ತಿ ನಂಬಿಕೆಗಳಿಗೆ ಸಂಭ್ರಮಾಶ್ಚರ್ಯ ಹೊಂದಿದವರಾಗಿ ತೆಂಗಿನ ಕಾಯಿಗಳನ್ನು ಒಡೆದು ಅದರ ಎಳೆನೀರಿನಿಂದ ಶೌತಿಗಳಿಗೆ ಅಭಿಷೇಕವನ್ನು ಮಾಡಿದರು. ಅಂದಿನಿಂದ ಆಂಜನೇಯನ ಪ್ರಸಿದ್ಧಿ ಎಲ್ಲೆಡೆಯೂ ಪ್ರಚುರಗೊಂಡಿತು. ಸುತ್ತಮುತ್ತಲ ಗ್ರಾಮದವರೇ ಅಲ್ಲದೆ ದೂರದೂರಗಳಿಂದಲೂ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಳ್ಳಲು ಜನರು ಆ ಊರಿಗೆ ಆಗಮಿಸತೊಡಗಿದರು. ಹೀಗೆ ಕೊಡಮಡಗು ಗ್ರಾಮ ಪ್ರಸಿದ್ಧವಾಯಿತು. ಸ್ವಾಮಿಯ ಶಾಶ್ವತ ಸೇವೆ ಹಾಗೂ ಧೂಪ ದೀಪ ನೈವೇದ್ಯಗಳಿಗಾಗಿ ಭೂಮಾನ್ಯವನ್ನೂ ಸ್ವಾಮಿಗೆ ಸಮರ್ಪಿಸಲಾಗಿದೆ.
ರಾಮದಾಸ ಶಾಸ್ತ್ರಿಗಳ ಮಗ ಹನುಮಂತ ಶಾಸ್ತ್ರಿಗಳು ತಂದೆಯವರಂತೆ ಶಾಸ್ತ್ರ ಪುರಾಣಗಳನ್ನು ಬಲ್ಲವರು, ತಂದೆಯವರು ನಡೆದು ಬಂದ ಹಾದಿಯಲ್ಲಿಯೇ ನಡೆದವರು. ಇವರಿಗೆ ಪುತ್ರಸಂತಾನವಿರಲಿಲ್ಲ. ಇವರ ದೌಹಿತನ ಮಗನೇ ಈ ಲೇಖನದ ಕರ್ತೃ.